ತನ್ನ ಟೈಟಟ್ ಮೂಲಕವೇ ದೊಡ್ಡ ಮಟ್ಟದ ಕುತೂಹಲ ಹುಟ್ಟಿಸಿರುವ, ಸಂತೋಷ್ ಕೊಡೆಂಕೇರಿ ಅವರ ನಿರ್ದೇಶನದ ಚಿತ್ರ `ರವಿಕೆ ಪ್ರಸಂಗ`. ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟೀಸರ್ ಈಗಾಗಲೇ ನೋಡುಗರಿಂದ ಅಪಾರ ಮೆಚ್ಚುಗೆ ಪ್ರಶಂಸೆ ಪಡೆದಿದೆ. ಇದೀಗ ಚಿತ್ರತಂಡ `ರವಿಕೆ ಪ್ರಸಂಗ` ಚಿತ್ರದ ಟ್ರೈಲರನ್ನು ಬಿಡುಗಡೆಗೊಳಿಸಿದೆ.
ಈ ಟ್ರೈಲರ್ ಕೂಡ ರಿಲೀಸಾದ ಕೆಲವೇ ದಿನಗಳಲ್ಲಿ ಅಪಾರ ಸಂಖ್ಯೆಯ ವೀಕ್ಷಣೆಯಾಗುವ ಮೂಲಕ ಚಿತ್ರದ ಮೇಲೆ ಪ್ರೇಕ್ಷಕರಲ್ಲಿರುವ ಕುತೂಹಲವನ್ನು ತೋರಿಸಿಕೊಟ್ಟಿದೆ.
ನಟ, ನಿರ್ಮಾಪಕ ಡಾಲಿ ಧನಂಜಯ ಕೂಡ ಟ್ರೇಲರನ್ನು ತುಂಬಾ ಚೆನ್ನಾಗಿ ಬಂದಿದೆ ಎಂದು ಮೆಚ್ಚಿಕೊಂಡಿದ್ದರು. ರವಿಕೆ ಅಂದರೆ ಮಹಿಳೆಯರು ಧರಿಸುವ ಬ್ಲೌಸನ್ನು ಪ್ರಮುಖವಾಗಿ ಇಟ್ಟುಕೊಂಡು ಒಂದು ಸುಂದರ ಕೌಟುಂಬಿಕ ಕಥಾಹಂದರದ ಜೊತೆಗೆ ಹಾಸ್ಯಭರಿತ ಹಾಗೂ ಉತ್ತಮ ಸಂದೇಶ ಹೇಳುವ ಕಥೆ `ರವಿಕೆ ಪ್ರಸಂಗ` ಚಿತ್ರದಲ್ಲಿದೆ. ಫೆಬ್ರವರಿ 16ರಂದು ಈ ಚಿತ್ರವು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಸಂತೋಷ್ ಕೊಡೆಂಕೇರಿ ಅವರು ತಿಳಿಸಿದ್ದಾರೆ.
`ದೃಷ್ಟಿ ಮೀಡಿಯಾ` ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಎಂಬ ಸಾಹಿತ್ಯದ ಹಾಡಿಗೆ ಮಾನಸ ಹೊಳ್ಳ, ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ದನಿಯಾಗಿದ್ದಾರೆ.
ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಕಿರುತೆರೆ ನಟಿ ಗೀತಾಭಾರತಿ ಭಟ್ ಅವರು ಹಾಡಿಗೆ ಸಖತ್ ಸ್ಟೆಪ್ ಕೂಡ ಹಾಕಿ ಡಾನ್ಸ್ ಮಾಡಿದ್ದಾರೆ. ಝೇಂಕಾರ್ ಮ್ಯೂಸಿಕ್ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ, ಸಂಭಾಷಣೆ ಬರೆದಿದ್ದಾರೆ. ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣುಮಕ್ಕಳಿಗೆ ಬಹಳ ಇಷ್ಟ, ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ, ಅದಕ್ಕೆ ತಕ್ಕಂತೆ ಬ್ಲೌಸ್ ಕೂಡ ಇರಬೇಕು. ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಸೀರೆಗೆ ತಕ್ಕ ರವಿಕೆಯನ್ನು ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಹೀಗೇ ಇರಬೇಕೆಂಬ ಆಸೆಯಿಂದ ಒಳ್ಳೆಯ ಟೈಲರ್ ಹತ್ತಿರ ರವಿಕೆಯನ್ನು ಹೊಲಿಸುತ್ತಾರೆ. ಆದರೆ, ಪ್ರತಿಬಾರಿ ಆ ರವಿಕೆ ಪರ್ ಫೆಕ್ಟಾಗಿರಲ್ಲ. ಇಂಥದ್ದೇ ಸರಿ ಹೊಂದದ ರವಿಕೆಯ ಸುತ್ತ ನಡೆಯುವ ರಗಳೆಯ ಕಾಮಿಡಿ ಕಥಾನಕವೇ `ರವಿಕೆ ಪ್ರಸಂಗ`. ಈ ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೇನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದೆ, ಈ ಚಿತ್ರದಲ್ಲಿ ಪ್ರಮುಖವಾಗಿ ಮಂಗಳೂರು ಕನ್ನಡ ಶೈಲಿಯನ್ನು ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ ಇದೇ ತಿಂಗಳ ೧೬ರಂದು ಈ ಚಿತ್ರ ತೆರೆಕಾಣಲಿದೆ.